top of page

ಶರಣ ತತ್ವದ ವೈಚಾರಿಕ ಪರಂಪರೆಯ ರೂವಾರಿ ಶಾಂತರಸರು:ರಹಮತ್ ತರೀಕೆರೆ

  • Writer: newsnowvijayanagar
    newsnowvijayanagar
  • Jan 29
  • 2 min read

ವಿಜಯನಗರ(ಹೊಸಪೇಟೆ)ಜೈ,29: ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಸವಾದಿ ಶರಣರ ಮತ್ತು ತತ್ವ ಪದಕಾರರ ವೈಚಾರಿಕ ಪರಂಪರೆಯ ಕೊಂಡಿಯಾಗಿ ಕೆಲಸ ಮಾಡಿದವರು ಶಾಂತರಸರು. ಶರಣರ ಅನುಭಾವ ಮತ್ತು ಆಧ್ಯಾತ್ಮಿಕ ಪರಂಪರೆ ತತ್ವಪದಕಾರರಲ್ಲಿ ಮುಂದುವರಿದಿರುವುದನ್ನು ಶಾಂತರಸರು ಗುರುತಿಸಿ ಅದನ್ನು ಪ್ರಚಲಿತಕ್ಕೆ ತರುತ್ತಾರೆ ಎಂದು ಕನ್ನಡ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕರಾದ ಡಾ.ರಹಮತ್ ತರೀಕೆರೆ ಅವರು ಅಭಿಪ್ರಾಯಪಟ್ಟರು.


ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯ ಸಭಾಂಗಣದಲ್ಲಿ ೨೮ನೇ ಜನವರಿ ೨೦೨೫ರಂದು ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಹಯೋಗದಲ್ಲಿ ಆಯೋಜಿಸಿದ್ದ ಶಾಂತರಸರ ಬದುಕು ಮತ್ತು ಸಾಹಿತ್ಯ ಜನ್ಮಶತಮಾನೋತ್ಸವ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.



ಮುಂದುವರೆದು ಮಾತನಾಡುತ್ತ ಶಾಂತರಸರು ಬಸವ ತತ್ವದ ಪ್ರತಿಪಾದಕರಾಗಿದ್ದರೂ,ಎಲ್ಲ ರೀತಿಯ ಸಾಮಾಜಿಕ ಬದಲಾವಣೆಗಳು ಬಸವಣ್ಣನವರ ಕಾಲದಲ್ಲೇ ಆಯಿತು ಎಂಬ ಕುರುಡು ನಂಬಿಕೆಯನ್ನು ಒಪ್ಪುತ್ತಿರಲಿಲ್ಲ. ಶಾಂತರಸರು ಬಸವಣ್ಣ ಪೂರ್ವದಲ್ಲಿ ಮತ್ತು ನಂತರದಲ್ಲಿ ಶರಣ ಚಳುವಳಿಗೆ ಶ್ರಮಿಸಿದ ಹಲವಾರು ಅಜ್ಞಾತ, ಅನಾಮಧೇಯ ಶರಣರನ್ನು, ತತ್ವಪದಕಾರರನ್ನು ಮುನ್ನಲೆಗೆ ತರುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಶಾಂತರಸರು ಜನ ಸಾಮಾನ್ಯರ ಪಡಿಪಾಟಲುಗಳನ್ನು ಸಾಹಿತ್ಯಕ್ಕೆ ಅಳವಡಿಸಿದವರು.ಸಾಹಿತ್ಯದ ಜೊತೆಗೆ ಅವರು ಸಂಗೀತ ಕಲಾ ಪ್ರಕಾರದ ಬೆಳವಣಿಗೆಗೂ ಒತ್ತುಕೊಟ್ಟರು.ಶಾಂತರಸರು ಗುಲ್ಬರ್ಗಾ,ಬೀದರ್ ಮತ್ತು ರಾಯಚೂರು ಭಾಗದಲ್ಲಿ ಹೆಚ್ಚಾಗಿ ಬಳಕೆಯಲ್ಲಿದ್ದ ಉರ್ದು ಭಾಷೆಯನ್ನು ಸಮುದಾಯದ ಆಚೆಗೆ ಕರೆತಂದು ಆ ಭಾಷೆಗೆ ಕವಿ ಪರಂಪರೆ ಮತ್ತು ಸಾಹಿತ್ಯ ಪರಂಪರೆಯನ್ನು ಸೃಷ್ಠಿಸುವಲ್ಲಿ ಕೊಂಡಿಯಾಗಿದ್ದರು ಎಂದರು. ಕಲ್ಯಾಣ ಕರ್ನಾಟಕ ಪ್ರದೇಶದ ಜನರು ಆಳುವ ವರ್ಗದ ಶೋಷಣೆಗೆ ತುತ್ತಾಗಿ ಸಮಸ್ಯೆಗಳನ್ನು ಎದುರಿಸುವ ಸಂದರ್ಭದಲ್ಲಿ ಅವರ ಕಣ್ಣನ್ನು ತೆರಸಿದರು. ಕಲ್ಯಾಣ ಕರ್ನಾಟಕಕ್ಕೆ ವಿಶೇಷ ಮೀಸಲಾತಿಯನ್ನು ಕಲ್ಪಿಸುವ ಕಾರ್ಯಕ್ಕೆ ಸಾಂಸ್ಕೃತಿಕ ಆಯಾಮವನ್ನು ತಂದುಕೊಟ್ಟಿರುವ ಶಾಂತರಸರ ಬದುಕು ಮತ್ತು ಸಾಹಿತ್ಯದ ಕುರಿತು ಹೊಸ ತಲೆಮಾರಿಗೆ ದಾಟಿಸುವುದು ನಮ್ಮ ಕರ್ತವ್ಯ ಎಂದು ತಿಳಿಸಿದರು.


ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ. ಡಿ.ವಿ. ಪರಮಶಿವಮೂರ್ತಿ ಅವರು ಮಾತನಾಡುತ್ತ, ಕನ್ನಡ ವಿಶ್ವವಿದ್ಯಾಲಯವು ಕೇಂದ್ರ ಸಾಹಿತ್ಯ ಅಕಾಡೆಮಿ ಅವರೊಂದಿಗೆ ಶಾಂತರಸರ ಬದುಕು ಮತ್ತು ಸಾಹಿತ್ಯ ಕುರಿತು ಕಾರ್ಯಕ್ರಮವನ್ನು ಆಯೋಜಿಸಿರುವುದು ನಿಜಕ್ಕೂ ಅರ್ಥಪೂರ್ಣವಾಗಿದೆ. ಶಾಂತರಸರು ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಕೃಷಿ ಮಾಡಿದ್ದಾರೆ. ಕನ್ನಡ ಕಾವ್ಯ ಲೋಕದಲ್ಲಿ ಗಜಲ್ ಪರಂಪರೆಗೆ ಅಡಿಪಾಯ ಹಾಕಿದವರು ಶಾಂತರಸರು ಎಂದರು. ನಂತರ ಶಾಂತರಸರ ಕವನ ಸಂಕಲನದ ಒಂದು ಕವನವನ್ನು ವಾಚಿಸುವ ಮೂಲಕ ಅಧ್ಯಕ್ಷೀಯ ನುಡಿಗಳನ್ನು ಮುಗಿಸಿದರು.


ಕೇಂದ್ರ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಬಸವರಾಜ ಸಾದರ ಅವರು ಮಾತನಾಡುತ್ತ ಶಾಂತರಸರ ವ್ಯಕ್ತಿತ್ವ ತುಂಬಾ ವಿಶಿಷ್ಟವಾದುದು. ಅವರು ಹೆಸರಿಗೆ ತಕ್ಕಂತೆ ಶಾಂತವಾಗಿಯೂ ಇದ್ದರು, ಕೆಲವೊಮ್ಮೆ ಕ್ರಾಂತಿಕಾರಿಯು ಆಗುತ್ತಿದ್ದರು. ಶಾಂತರಸರಲ್ಲಿ ಪ್ರತಿಭಟಿಸುವ ಗುಣ ಚಿಕ್ಕಂದಿನಲ್ಲೇ ಕಂಡು ಬರುತ್ತದೆ. ಶಾಂತರಸರು ತಾವು ನಂಬಿದ್ದ ಧೋರಣೆಯನ್ನು ಬದಲಿಸದವರು ಮತ್ತು ಕೈಗೊಂಡ ಕಾರ್ಯಕ್ಕೆ ಯಾವಾಗಲೂ ಬದ್ಧರಾಗಿರುತ್ತಿದ್ದರು. ಶಾಂತರಸರು ಕಾವ್ಯ, ಘಜಲ್, ಕಾದಂಬರಿ, ಗ್ರಂಥಸAಪಾದನೆ, ಅನುವಾದ ಹೀಗೆ ಸಾಹಿತ್ಯದ ಹಲವಾರು ಪ್ರಕಾರಗಳಲ್ಲಿ ಕೆಲಸ ಮಾಡಿದರು. ಬಂಡಾಯವನ್ನು ಸಾಹಿತ್ಯಕ್ಕೆ ಅಳವಡಿಸಿದ ಕೀರ್ತಿಯೂ ಇವರಿಗೆ ಸಲ್ಲುತ್ತದೆ ಎಂದರು.

ವೇದಿಕೆ ಮೇಲಿದ್ದ ಗಣ್ಯರು ಶಾಂತರಸರ ಭಾವಚಿತ್ರಕ್ಕೆ ಪುಷ್ಪ ಅರ್ಪಿಸಿದರು.


ವಿವಿಧ ಗೋಷ್ಠಿಗಳಲ್ಲಿ ಪ್ರಾಧ್ಯಾಪಕರಾದ ಡಾ. ವೆಂಕಟಗಿರಿ ದಳವಾಯಿ, ಡಾ. ಅಮರೇಶ ನುಗಡೋಣಿ, ಡಾ. ಕೆ. ರವೀಂದ್ರನಾಥ, ಭಾಗ್ಯಜ್ಯೋತಿ ಹಿರೇಮಠ, ಸಿ.ಎಸ್. ಭೀಮರಾಯ, ಪ್ರಭು ಖಾನಾಪುರೆ ಇವರು ಶಾಂತರಸರ ವ್ಯಕ್ತಿತ್ವ, ಕಾವ್ಯ, ಘಜಲ್,ನಾಟಕ, ಪ್ರಬಂಧಗಳು,ಸಂಶೋಧನೆ, ಗ್ರಂಥಸಂಪಾದನೆ, ಅನುವಾದ ಮತ್ತು ಸಂಪಾದನೆಗಳ ಕುರಿತು ಪ್ರಬಂಧ ಮಂಡಿಸಿದರು. ಕನ್ನಡದ ಪ್ರಸಿದ್ಧ ಲೇಖಕಿ ಭಾರತಿ ಮೋಹನ ಕೋಟಿ ಸಮಾರೋಪ ಭಾಷಣ ಮಾಡಿದರು.ಕುಲಸಚಿವರಾದ ಡಾ.ವಿಜಯ್ ಪೂಣಚ್ಚ ತಂಬಂಡ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಪ್ರಾಧ್ಯಾಪಕರಾದ ಡಾ. ಗೋವಿಂದ ಸಮಾರೋಪದ ವಂದನಾರ್ಪಣೆ ಮಾಡಿದರು.


ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.ಸಂಗೀತ ವಿಭಾಗದ ವಿದ್ಯಾರ್ಥಿಗಳು ಪ್ರಾರ್ಥಿಸಿದರು.ವಿಭಾಗದ ಡಾ.ಮಲ್ಲಿಕಾರ್ಜುನಗೌಡ ವಣೇನೂರ ಸ್ವಾಗತಿಸಿದರು. ಸಂಶೋಧನಾರ್ಥಿ ಸಂತೋಷ್ ಕಾರ್ಯಕ್ರಮವನ್ನು ನಿರೂಪಿಸಿದರು

Comments


bottom of page