top of page

ಸರ್ಕಾರದ ಎರಡು ವರ್ಷಗಳ ಸಾಧನೆ ಸಮರ್ಪಣೆ ಸಂಕಲ್ಪ ಕಾರ್ಯಕ್ರಮದಲ್ಲಿ 1.11 ಲಕ್ಷಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ,ಆರು ತಿಂಗಳಲ್ಲಿ ರಾಜ್ಯದಲ್ಲಿ ಬಾಕಿ ಇರುವ 50 ಸಾವಿರ ಕುಟುಂಬಗಳಿಗೂ ಹಕ್ಕುಪತ್ರ : ಸಿ.ಎಂ.ಸಿದ್ದರಾಮಯ್ಯ

  • Writer: newsnowvijayanagar
    newsnowvijayanagar
  • May 21
  • 2 min read

ಹೊಸಪೇಟೆ (ವಿಜಯನಗರಜಿಲ್ಲೆ) :ರಾಜ್ಯದಲ್ಲಿನ ಜನವಸತಿ ಪ್ರದೇಶಗಳಾದ ಹಟ್ಟಿ, ತಾಂಡಾ, ಹಾಡಿಗಳನ್ನು ಕಂದಾಯ ಗ್ರಾಮಗಳನ್ನಾಗಿ ರಚಿಸಿ, 1,11,111 ಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕು ಪತ್ರ ವಿತರಿಸುವ ಮೂಲಕ ಸರ್ಕಾರದ ಎರಡು ವರ್ಷಗಳ ಸಾಧನೆಯ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಿದ್ದು, ಮುಂದಿನ ಆರು ತಿಂಗಳೊಳಗಾಗಿ ರಾಜ್ಯದಲ್ಲಿ ಬಾಕಿ ಇರುವ 50 ಸಾವಿರ ಕುಟುಂಬಗಳಿಗೂ ಆಸ್ತಿ ಹಕ್ಕುಪತ್ರಗಳನ್ನು ವಿತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಘೋಷಿಸಿದರು.

ಸರ್ಕಾರ ಎರಡು ವರ್ಷ ಪೂರೈಸಿದ ಸಂದರ್ಭದಲ್ಲಿ ಕಂದಾಯ ಇಲಾಖೆಯಿಂದ ಮಂಗಳವಾರ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾದ "ಪ್ರಗತಿಯತ್ತ ಕರ್ನಾಟಕ - ಸಮರ್ಪಣೆ ಸಂಕಲ್ಪ" ಸಮಾವೇಶದಲ್ಲಿ ಸಾಂಕೇತಿಕವಾಗಿ ಫಲಾನುಭವಿ ಕುಟುಂಬಗಳಿಗೆ ಹಕ್ಕುಪತ್ರ ವಿತರಣೆ ಮಾಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಟ್ಟಿ, ತಾಂಡಾ, ಹಾಡಿ ಮುಂತಾದ ಜನವಸತಿ ಪ್ರದೇಶಗಳಲ್ಲಿನ ಬಡ ಕುಟುಂಬಗಳು ವಾಸಿಸುವ ಮನೆಗಳಿಗೆ ಯಾವುದೇ ಹಕ್ಕಾಗಲಿ, ದಾಖಲೆಗಳಾಗಲಿ ಇರಲಿಲ್ಲ, ಇಂತಹವರಿಗೆ ಹಕ್ಕುಪತ್ರಗಳನ್ನು ಕೊಟ್ಟು, ಅವರು ನೆಮ್ಮದಿಯಿಂದ ಬದುಕಬೇಕೆಂಬುದು ನಮ್ಮ ಸರ್ಕಾರದ ಆಶಯವಾಗಿದೆ. ಹಲವು ದಶಕಗಳಿಂದಲೂ ಇದು ನೆನೆಗುದಿಗೆ ಬಿದ್ದಿತ್ತು. 2015 ರಲ್ಲಿ ಕಾಗೋಡು ತಿಮ್ಮಪ್ಪ ಅವರು ಕಂದಾಯ ಮಂತ್ರಿಯಾಗಿದ್ದಾಗ, ಈ ಕಾರ್ಯಕ್ಕೆ ವೇಗ ನೀಡಲಾಯಿತು. “ಉಳುವವನೇ ಭೂಮಿಯ ಒಡೆಯ” ಎಂದು ಈ ಹಿಂದೆ ನಮ್ಮ ಪಕ್ಷದ ಸರ್ಕಾರ ಇದ್ದಾಗ ಘೋಷಿಸಿ, ಕಾರ್ಯರೂಪಕ್ಕೆ ತಂದರೆ ನಾವು “ವಾಸಿಸುವವನೇ ಮನೆಯ ಒಡೆಯ” ಎಂದು ಘೋಷಿಸಿದ್ದೆವು. ಹಟ್ಟಿ, ಹಾಡಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸಿ ಇಲ್ಲಿ ವಾಸಿಸುತ್ತಿರುವ ಜನರಿಗೆ ಭದ್ರತೆ ಕೊಟ್ಟು, ಅವರ ಮನೆಯ ಆಸ್ತಿಗಳನ್ನು ಅವರ ಹೆಸರಿಗೆ ನೊಂದಾಣಿ ಮಾಡಿಸಿ, ಹಕ್ಕುಪತ್ರವನ್ನು ವಿತರಿಸುವಂತಹ ಬಹುದೊಡ್ಡ ಕಾರ್ಯವನ್ನು ನಾವು ಮಾಡಿದ್ದೇವೆ. ರಾಹುಲ್ ಗಾಂಧಿ ಅವರ ಆಶಯದಂತೆ, ರಾಜ್ಯದಲ್ಲಿನ ಎಲ್ಲಾ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ರಚಿಸಿ, ಬಾಕಿ ಉಳಿದಿರುವ 50 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೂ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ಪ0ಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ನುಡಿದಂತೆ ನಡೆದಿದ್ದೇವೆ : ಚುನಾವಣೆ ವೇಳೆ ನಾವು ಕೊಟ್ಟಿದ್ದ ಭರವಸೆಗಳಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೊಳಿಸುತ್ತೇವೆ ಎಂದು ಮಾತು ಕೊಟ್ಟಿದ್ದೆವು, ಅದರಂತೆ ನಮ್ಮ ಸರ್ಕಾರ ಬಂದ ಒಂದು ವರ್ಷದೊಳಗೆ ಶಕ್ತಿ, ಗೃಹಜ್ಯೋತಿ, ಗೃಹಲಕ್ಷಿö್ಮÃ, ಅನ್ನಭಾಗ್ಯ ಹಾಗೂ ಯುವನಿಧಿ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನುಡಿದಂತೆ ನಡೆದಿದ್ದೇವೆ.

ದೇಶದಲ್ಲಿಯೇ ಗ್ಯಾರಂಟಿ ಯೋಜನೆಗಳನ್ನು ಮಾದರಿಯಾಗಿ ಅನುಷ್ಟಾನಗೊಳಿಸಲಾಗಿದೆ. ಶಕ್ತಿ ಯೋಜನೆಯಡಿ ರಾಜ್ಯದ 3.5 ಕೋಟಿ ಮಹಿಳೆಯರು ಉಚಿತವಾಗಿ ಬಸ್ ಪ್ರಯಾಣ ಮಾಡಿದ್ದಾರೆ. ಗೃಹಜ್ಯೋತಿ ಯೋಜನೆಯಡಿ ರಾಜ್ಯದ 1.62 ಕೋಟಿ ಕುಟುಂಬಗಳಿಗೆ 200 ಯುನಿಟ್‌ವರಗೆ ಉಚಿತ ವಿದ್ಯುತ್ ನೀಡುತ್ತಿದ್ದೇವೆ. 1.22 ಕೋಟಿ ಮನೆ ಯಜಮಾನಿಯರಿಗೆ ಗೃಹಲಕ್ಷಿö್ಮ ಯೋಜನೆಯಡಿ ತಿಂಗಳಿಗೆ 2 ಸಾವಿರ ರೂ.ಗಳ ಪ್ರೋತ್ಸಾಹ ಧನವನ್ನು ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತಿದ್ದೇವೆ. ಅನ್ನಭಾಗ್ಯ ಯೋಜನೆಯಡಿ ರಾಜ್ಯದ 4.42 ಕೋಟಿ ಬಿಪಿಎಲ್ ಪಡಿತರದಾರರ ಪ್ರತಿ ಸದಸ್ಯರಿಗೆ ತಿಂಗಳಿಗೆ 10 ಕೆ.ಜಿ. ಅಕ್ಕಿ ಉಚಿತವಾಗಿ ಪಡೆಯುತ್ತಿದ್ದಾರೆ. 2.67 ಲಕ್ಷ ಯುವಕ, ಯುವತಿಯರು ಯುವನಿಧಿ ಯೋಜನೆಯಡಿ ನಿರುದ್ಯೋಗ ಭತ್ಯೆ ಪಡೆಯುತ್ತಿದ್ದಾರೆ. ಈ ಎಲ್ಲ ಗ್ಯಾರಂಟಿ ಯೋಜನೆಗಳು ಯಾವುದೇ ಜಾತಿ, ಧರ್ಮ, ಪಕ್ಷ ಎನ್ನುವ ಭೇದವಿಲ್ಲದೆ ಎಲ್ಲರಿಗೂ ಸಾಮಾಜಿಕ, ಆರ್ಥಿಕ ಶಕ್ತಿ ಕೊಡುವ ಕಾರ್ಯಕ್ರಮಗಳಾಗಿವೆ. ನಮ್ಮ ರಾಜ್ಯ ಸರ್ವಜನಾಂಗದ ಶಾಂತಿಯ ತೋಟ. ಬಹುತ್ವ ಇರುವ ನಮ್ಮ ದೇಶದಲ್ಲಿ ವೈವಿಧ್ಯತೆಯಲ್ಲಿ ಏಕತೆ ಕಾಣುವುದು ನಮ್ಮ ಸರ್ಕಾರದ ಧ್ಯೇಯವಾಗಿದೆ. ಸರ್ವರನ್ನೂ ಸಮಾನವಾಗಿ ಗೌರವಿಸುವ ರಾಜ್ಯ. ಸಂವಿಧಾನದ ಅಡಿಯಲ್ಲಿ ಸರ್ವಧರ್ಮಗಳನ್ನೂ ಸಮಾನವಾಗಿ ಕಾಣಬೇಕು. ನಾವು ಇದೇ ಮೌಲ್ಯವನ್ನು ಪಾಲಿಸುತ್ತಿದ್ದೇವೆ ಎಂದರು.

ರಾಜ್ಯಕ್ಕೆ ಅನ್ಯಾಯ : ಕಳೆದ ಎರಡು ವರ್ಷಗಳಲ್ಲಿ ಕೇಂದ್ರದಿAದ ನಮ್ಮ ರಾಜ್ಯಕ್ಕೆ ಬಹಳ ಅನ್ಯಾಯವಾಗಿದೆ. ತೆರಿಗೆ ಪಾಲಿನಲ್ಲಿ ನಮಗೆ ಬರಬೇಕಿದ್ದ ಪಾಲು ಬಂದಿಲ್ಲ. 4.5 ಲಕ್ಷ ಕೋಟಿ ರೂ.ಗಳನ್ನು ನಮ್ಮ ರಾಜ್ಯ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ನೀಡುತ್ತಿದೆ. ಈ ಪೈಕಿ ನಮಗೆ ಕೇವಲ 65 ಸಾವಿರ ಕೋಟಿ ರೂ. ಮಾತ್ರ ಬರುತ್ತಿದೆ. 13 ಸಾವಿರ ಕೋಟಿ ರೂ. ನಮಗೆ ನಷ್ಟವಾಗುತ್ತಿದೆ. ಕೇಂದ್ರ ಪುರಸ್ಕೃತ ಯೋಜನೆಗಳ ಮೊತ್ತವೂ ಕಡಿತವಾಗುತ್ತಿದ್ದು, 22 ಸಾವಿರ ಕೋಟಿ ರೂ.ಗಳ ಪೈಕಿ 18 ಸಾವಿರ ಕೋಟಿ ರೂ. ಮಾತ್ರ ಬಂದಿದೆ. ಇನ್ನೂ 4 ಸಾವಿರ ಕೋಟಿ ರೂ. ಬರಲಿಲ್ಲ. ಹಣಕಾಸು ಆಯೋಗ ಹೇಳಿದಂತೆ 5,495 ಕೋಟಿ ರೂ. ನಮಗೆ ಬಿಡುಗಡೆ ಆಗಬೇಕಿತ್ತು, ಈ ಪೈಕಿ ಯಾವುದೇ ಅನುದಾನ ಬರಲಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗಾಗಿ 5,300 ಕೋಟಿ ರೂ. ಗಳನ್ನು ಕೇಂದ್ರ ಬಜೆಟ್‌ನಲ್ಲಿ ಘೋಷಿಸಲಾಯಿತು. ಆದರೆ ಈವರೆಗೂ ಹಣ ಬಿಡುಗಡೆ ಆಗಲೇ ಇಲ್ಲ. ನಮ್ಮ ರಾಜ್ಯದ ಲೋಕಸಭಾ ಸದಸ್ಯರು ಒಗ್ಗೂಡಿ, ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸ ಆಗಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.

Comments


bottom of page