top of page

ಚಾಮಲಾಪೂರ: ಜಾತ್ರಾ ಮಹೋತ್ಸವ ಸಾಮೂಹಿಕ ವಿವಾಹ ; ಧರ್ಮದಿಂದ ಜನರ ಉದ್ಧಾರವಾಗಬೇಕು, ಸಂಸ್ಕಾರಯುತವಾಗಬೇಕು : ಸ್ವಾಮೀಜಿ

  • Writer: newsnowvijayanagar
    newsnowvijayanagar
  • Mar 2
  • 1 min read


ಕೊಪ್ಪಳ: ಧರ್ಮ ಎಂದರೆ ಜಾತಿಯಲ್ಲ ಅದು ಜನರಿಗೆ ಸರಾಗವಾಗಿ ತಮ್ಮ ಜೀವನವನ್ನು ಸಂಸ್ಕಾರಯುತವಾಗಿ ನಡೆಸಲು ದಾರಿದೀಪವಾಗುವಂತೆ ಮಾಡುವದಾಗಿದೆ ಎಂದ ಇಟಗಿ ಭೂ ಕೈಲಾಸ ಮೇಲುಗದ್ದುಗೆಮಠದ ಶ್ರೀ ಗುರುಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಧರ್ಮಬೋಧನೆ ಮಾಡಿದರು.

ಅವರು ತಾಲೂಕಿನ ಚಾಮಲಾಪೂರ ಗ್ರಾಮದ ಪವಾಡ ಪುರುಷ ಶ್ರೀ ಕರಿಬಸವೇಶ್ವರ ಗದ್ದಿಗೆಯಲ್ಲಿ ನಡೆದ ಮಠದ ೧೦ನೇ ವರ್ಷದ ಸಾಮೂಹಿಕ ವಿವಾಹಗಳು ಮತ್ತು ಜಾತ್ರಾ ಮಹೋತ್ಸವ ನಿಮಿತ್ಯ ವಿವಿಧ ಕಾರ್ಯಕ್ರಮಗಳನ್ನು ಉದ್ದೇಶಿಸಿ,ನೂತನ ಜೋಡಿಗಳಿಗೆ ಶುಭ ಹಾರೈಸಿ ಮಾತನಾಡಿದರು.

ಇಲ್ಲಿ ಸರಳವಾಗಿ ವಿವಾಹವಾಗಿದ್ದೇವೆ ಎಂಬ ಕೊರಗು ಬೇಡ ಇದು ನಿಜಕ್ಕೂ ಸೌಭಾಗ್ಯವಂತರ ಮದುವೆ ಇಲ್ಲಿಗೆ ಕೇವಲ ನಿಮ್ಮ ಬಂಧುಗಳು ಅಲ್ಲದೇ, ಅನೇಕ ದೂರದ ಮಠಾದೀಶ್ವರರು, ಗಣ್ಯರು, ಎಲ್ಲಾ ವಧುವರರ ಬಂಧುಗಳು ಸಹ ಆಗಮಿಸಿ ಶಾಸ್ತ್ರೋಕ್ತವಾಗಿ ಮದುವೆ ಮಾಡಿಸಿದ್ದಾರೆ, ನಿಮ್ಮನ್ನು ಸಾಲದ ಶೂಲದಿಂದಲೂ ದೂರ ಇಟ್ಟಿದ್ದಾರೆ, ಇದು ನಿಜಕ್ಕೂ ಹೆಮ್ಮೆ ಪಡಬೇಕಾದ ಸಂಗತಿ ಎಂದರು.

ಇದೇ ವೇಳೆ ಮಾತನಾಡಿದ ಕುಷ್ಟಗಿಯ ಮದ್ದಾನೇಶ್ವರಮಠದ ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಜನರ ಕಷ್ಟಗಳಿಗೆ ಸ್ಪಂದಿಸಲು ಇಲ್ಲಿನ ಸಂಸಾರಿಗಳಾದರೂ ದೀಕ್ಷೆ ಪಡೆದು ಜನರಿಗಾಗಿ ಕೆಲಸ ಮಾಡುತ್ತಿರುವದು ಸಂತೋಷದ ಸಂಗತಿ ಕಳೆದ ೧೨ ವರ್ಷಗಳಿಂದ ಮಠ ಕಟ್ಟಿ ಕೆಲಸ ಮಾಡುವದರ ಜೊತೆಗೆ ಹತ್ತು ವರ್ಷದಿಂದ ಜಾತ್ರೆ ಮಾಡಿ ಜನರಿಗೆ ಧರ್ಮ ಬೋಧನೆ, ಸಾಮೂಹಿಕ ವಿವಾಗಳನ್ನು ಮಾಡುತ್ತಿದ್ದಾರೆ, ಸತ್ಕಾರ್ಯಕ್ಕೆ ಜನರೂ ಸಹ ಸ್ಪಂದನೆ ನೀಡುತ್ತಿದ್ದಾರೆ, ಹೊರ ಜಿಲ್ಲೆ,ರಾಜ್ಯದ ಜನರು ಸಹ ಸ್ಪಂದನೆ ನೀಡುತ್ತಿದ್ದಾರೆ.

ಶ್ರೀ ಕರಿಬಸವೇಶ್ವರ ಮಹಾಸ್ವಾಮಿಗಳು ಸಂಸ್ಥಾನಮಠ ಚಾಮಲಾಪೂರ ಶ್ರೀಗಳ ತುಲಾಭಾರ,೧೧ ಜೋಡಿ ಸಾಮೂಹಿಕ ವಿವಾಹಗಳು, ಶ್ರೀ ಕರಿಬಸವೇಶ್ವರ ಪೂರ್ವ ಪ್ರಥಮಿಕ ಶಾಲೆಯ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ, ಗಜೇಂದ್ರಗಡ ಫೈವ್ ಸ್ಟಾರ್ ಮೆಲೋಡೀಸ್ ಆರ್ಕೆಸ್ಟ್ರಾ ಇವರಿಂದ ರಸಮಂಜರಿ ಕಾರ್ಯಕ್ರಮ,ಶ್ರೀ ಗವಿಮಠ ವಿದ್ಯಾಪೀಠದ ಮಕ್ಕಳಿಂದ ಸಂಗೀತ ಕಾರ್ಯಕ್ರಮ ಹಾಗೂ ಗಂಗಾವತಿಯ ಬೀಚಿ ಪ್ರಾಣೇಶ ಗಂಗಾವತಿ ಮತ್ತು ಮಿಮಿಕ್ರಿ ರಾಜ ನರಸಿಂಹ ಜೋಶಿ ತಂಡದವರಿಂದ ಹಾಸ್ಯ ಸಂಜೆ ಕಾರ್ಯಕ್ರಮಗಳು ಇಡೀ ದಿನ ಜನರ ಮನತಣಿಸಿದವು.

ಕಾರ್ಯಕ್ರಮದಲ್ಲಿ ಪೂಜ್ಯರಾದ ಶಂಕ್ರಯ್ಯಜ್ಜ ಹಿರೇಮಠ, ಮುಖಂಡರುಗಳಾದ ಸಂಗನಗೌಡ್ರ ಬಿಟಿಪಾಟೀಲ, ಪೋಲಿಸ್ ಅಧಿಕಾರಿ ಕನಕಪ್ಪ ಉಪ್ಪಾರ, ಅಂದಾನಗೌಡ್ರ ಉಳ್ಳಾಗಡ್ಡಿ,ವಕೀಲ ಹನುಮಂತ ಜಾಣಗಾರ, ಹುಲಗಪ್ಪ ಹರಿಜನ, ಅಂದಪ್ಪ ಕೊಪ್ಪಳ, ಶ್ರೀನಿವಾಸಾಚಾರ ಜೋಶಿ, ಗ್ರಾಮ ಪಂಚಾಯತಿ ಸದಸ್ಯರಾದ ಮರಿಯಪ್ಪ ಜಿ.ಹೆಚ್.ತಾಯಮ್ಮ, ಮತ್ತು ಶ್ರೀಶೈಲ ಮೇಟಿ, ಮುಖ್ಯ ಗುರು ಚಂದ್ರಕಾಂತ, ಪತ್ರಕರ್ತ, ಜಿಲ್ಲಾ ಗ್ಯಾರಂಟಿ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ, ಬಾಳಪ್ಪ ಹನುಮಗೌಡ್ರ, ಹನುಮೇಶರಾವ್ ದೇಶಪಾಂಡೆ, ಹನುಮಂತಪ್ಪ ಕುರಿ, ರಾಮನಗೌಡ್ರ, ಈರನಗೌಡ್ರ ಸೇರಿ ಅನೇಕರು ಉಪಸ್ಥಿತರಿದ್ದರು.

ಗುರುರಾಜ ಜೋಶಿ ಪ್ರಾರ್ಥಿಸಿದರು, ನಿಂಗಪ್ಪ ಯಲಮಗೇರಿ ಸ್ವಾಗತಿಸಿ ಮಠದ ಕುರಿತು ಮಾತನಾಡಿದರು. ಶಿಕ್ಷಕಿ ಕಾವ್ಯ ಎನ್. ಮತ್ತು ಶಿಕ್ಷಕ ಆನಂದ ಮರಕಟ್ ನಿರೂಪಿಸಿದರು.

Commentaires


bottom of page